ಕಲಿಯುಗದಲಿ ಹರಿನಾಮವ
ಕಲಿಯುಗದಲಿ ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವೋ ರಂಗಾ|| ಸುಲಭದ ಮುಕ್ತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆ ಮನವೆ|| ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ| ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆ ಮನವೆ|| ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ತುಚ್ಛನು ನಾನೆಂದೆನಬೇಡ| ಅಚ್ಯುತಾನಂತ ಗೋವಿಂದ ಮುಕುಂದನ ಇಚ್ಛೆಯಿಂದ ನೀ ನೆನೆ ಮನವೆ|| ಜಪವೊಂದರಿಯೆನು ತಪವೊಂದರಿಯೆನು ಉಪದೇಶವಿಲ್ಲೆಂದೆನಬೇಡ| ಅಪಾರ ಮಹಿಮ ಶ್ರೀ ಪುರಂದರವಿಟ್ಠಲನ ಉಪಾಯದಿಂದಲಿ ನೆನೆ ಮನವೆ|| —ಪುರಂದರದಾಸ