ಜಯ ದೇವ ಜಯ ದೇವ ಜಯ ರಾಮಕೃಷ್ಣ

ಕೀರ್ತನ – ದಾದರಾ

ಜಯ ದೇವ ಜಯ ದೇವ ಜಯ ರಾಮಕೃಷ್ಣ

ಸಾರದಾ ಶ್ರೀಪತಿ ಭಕ್ತಜನರ ಗತಿ ಯುಗದ ಅವತಾರ||

ತುತ್ತಿನ ವಿದ್ಯೆಗೆ ದೂರದಿ ನಿಂದೆ  

ದೇವನ ವಿದ್ಯೆಯ ಗಳಿಸುವೆನೆಂದೆ|

ಧನಿಯಿಂದ ಭಿಕ್ಷೆಯ ಪಡೆಯುತಲಂದೆ

ಸತ್ಯದ ನೆಲೆಗೆ ನೀ ಸ್ಥಿರವಾಗಿ ಸಂದೆ||

ಶಿಲೆಯಲ್ಲವೀ ತಾಯಿ ನಿಜದ ಜಗದಂಬೆ

ಕಂಬನಿ ಧಾರೆಗೆ ಕರಗುವಳೆಂದೆ|

ತಾಯಿ ತಾಯಿ ಎಂದು ಕೂಗುತ ನೊಂದೆ

ಲೋಕವೆಲ್ಲವ ತಾಯ ಮಡಿಲಾಗಿ ಕಂಡೆ||

ಚಲಿಸದ ಬ್ರಹ್ಮವು ಚಲಿಸಲು ಶಕ್ತಿ

ಸುರುಳಿ ಸುತ್ತಿದ ಹಾವು ಹರಿವ ಸಂಗತಿ|

ಜ್ಞಾನವೊ ಭಕ್ತಿಯೊ ಸಿದ್ದಿಯ ಯುಕುತಿ

ತಿನ್ನು ಮಾವಿನಹಣ್ಣು ಜೀವಕೆ ತೃಪ್ತಿ ||

ಮತಗಳೆನಿತೊ ಅನಿತೆ ಪಥಗಳು ಎಂದೆ

ಹೆಸರದು ಹಲವಾರು ಉಸಿರು ತಾನೊಂದೆ!

ಸಾಧನೆಯ ದಾರಿ ತೆರೆದು ತೋರಿದೆ

ಹೆಸರಿನಾಚೆಯ ಬೆಳಕ ಭುವಿಗೆ ನೀಡಿದೆ||

ವಚನವೇದದ ಘೋಷ ಭವತಿಮಿರ ನಾಶ

ಸಂದೇಹವಿನಿತಿಲ್ಲ ಇದು ಸ್ವಪ್ರಕಾಶ|

ದೇವದೇವಿಯರೆಲ್ಲ ನಿನ್ನಲ್ಲೇ ವಾಸ

ಅಂಶ ಅಂಶಕೆ ಬಂತು ಪೂರ್ಣದ ಸ್ಪರ್ಶ||

ವಿವೇಕ ರಾಖಾಲ ಶಿಷ್ಯ ಸಂತತಿ

ಸಂಘರೂಪದಿ ಹರಡಿ ನವಯುಗ ಕೀರ್ತಿ|

ತ್ಯಾಗಕೆ ಸೇವೆಗೆ ಅಳಿಯದ ಸ್ಫೂರ್ತಿ

ಕೃಪೆಯ ಧಾರೆಯು ಸುರಿದು ನಿತ್ಯಸಂತೃಪ್ತಿ||

– ಮುರಳೀಧರ

Leave a Comment

Your email address will not be published. Required fields are marked *