ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ|
ನಾದಮೂರ್ತಿ ನಿನ್ನ ಚರಣ
ಮೋದದಿಂದ ಭಜಿಸುವೆನೋ||
ಧ್ಯಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿ|
ಗಾನಲೋಲನ ಕುಳ್ಳಿರಿಸಿ
ಜ್ಞಾನದಿಂದ ಭಜಿಸುವೆನೋ||
ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ|
ಮುಕ್ತನಾಗಬೇಕು ಎಂದು ಮುತ್ತಿನ ಆರತಿಯೆತ್ತುವೆನೋ||
ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ|
ಘನ್ನಮಹಿಮ ವಿಜಯವಿಟ್ಠಲ
ನಿನ್ನ ಭಕ್ತನ ಕೇಳೋ ಸೊಲ್ಲ||
—-ವಿಜಯದಾಸ