ಶಕ್ತನಾದರೆ ನೆಂಟರೆಲ್ಲ ಹಿತರು| ಅ-
ಶಕ್ತನಾದರೆ ಅವರೆ ವೈರಿಗಳು ಲೋಕದಲಿ||
ಕಮಲ ಅರ್ಕನಲಿರುವ ಕಡು ನೆಂಟತನದಿಂದ
ವಿಮಲ ಜಲದೊಳಗೆ ಅದು ಆಡುತಿಹುದು|
ಕ್ರಮಗೆಟ್ಟು ನೀರಿಂದ ತಡಿಗೆ ಬೀಳಲು ರವಿಯ
ಅಮಿತ ಕಿರಣಗಳಿಂದ ಕಂದಿಹೋಗುವುದು||
ವನಸುತ್ತಿ ಸುಡುವಾಗ ವಾಯು ಬೀಸಲು ಉರಿಯು
ಘನ ಪ್ರಜ್ವಲಿಸುತಿಹುದು ಗಗನಕಡರಿ|
ಮನೆಯೊಳಿಹ ದೀಪಕ್ಕೆ ಮಾರುತನು ಸೋಂಕಿದರು
ಘನಶಕ್ತಿಯುಡುಗಿ ತಾ ನಂದಿಹೋಗುವುದು||
ಕರಿಯ ಕಾಯಿದ ಹರಿಯ ಕರುಣತಪ್ಪಿದ ಮೇಲೆ
ಮರೆಯ ಹೊಕ್ಕರು ಕಾವ ಮಹಿತರಾರಯ್ಯ|
ವರದ ಶ್ರೀ ಪುರಂದರವಿಟ್ಠಲನು ಒಲಿದಿರಲು
ಸರುವ ಜನರೆಲ್ಲ ಮೂಜಗದಿ ಹಿತರು||
—-ಪುರಂದರದಾಸ
ಹೊಸತು ಮನೆಗಳನ್ನು ತಿಳಿಸಿ.