ವ್ಯಾಸರಾಯರ ಸೇವೆ ಲೇಸಾಗಿ ಮಾಡಲು
ದಾಸನೆಂದೆನಿಸಿಕೊಂಬ
ಸಾಸಿರನಾಮದ ವಾಸುದೇವನ ಭಕ್ತ
ಕಾಷಾಯ ವಸ್ತ್ರಧರ
ತಾ ಸಹಗಮನದಿ ಪತಿಸಹ ಪೋಗುವ
ಆ ಸ್ತ್ರೀಯು ಬ್ರಹ್ಮಣ್ಯತೀರ್ಥರಲ್ಲಿಗೆ ಪೋಗೆ
ಶ್ರೀಶ ಬದರಿಯಲ್ಲಿ ಪೇಳಿದ ಮಹಿಮೆಯ
ಆ ಸುಮಹಿಮ ಪ್ರಹ್ಲಾದನ್ನ ಸ್ಮರಿಸುತ್ತ
ಮೋಸ ಬರುವುದೆಂದಾಲೋಚನೆ ಇಲ್ಲದೆ
ಆ ಸತಿ ವಂದಿಸೆ ಸುಮಂಗಲ್ಯವನಿತ್ತು
ಆ ಸಮಯದಿ ಮಂತ್ರಾಘ್ರ್ಯಾವನೆ ಕೊಂಡು
ತಾ ಸುಮ್ಮಾನದಿ ಬನ್ನೂರಿಗೆ ಪೋಗ್ಯತಿ
ಯಾ ಸತಿಪತಿಯ ಪ್ರಾಣವನುಳಿಹಿ ರನ್ನ
ತಾ ಸಮೀಪದಿ ಮಠದಲ್ಲಿ ವಾಸಮಾಡಿಸಿ
ಕುಸುಮಾಕ್ಷತೆ ಫಲ ಮಂತ್ರಿಸಿ ಆಕೆಗೆ ಕೊಟ್ಟು
ಆ ಸುಮಂಗಲಿಯಲ್ಲಿ ಪ್ರಹ್ಲಾದ ಪುಟ್ಟಿದ
ಆ ಸಮಯದಿ ಚಿನ್ನದ ಹರಿವಾಣದಲಿ ಶಿಶು
ತಾನು ಬಿಡದೆ ಕಣ್ವ ನದಿಯಲ್ಲೀ
ಶಿಷ್ಯರಿಗೆ ತೊಳಸಿ ತಂದು ಮಠಕೆ ಆಗ
ವಾಸುದೇವನಭಿಷೇಕ ಕ್ಷೀರವನ್ನು
ಆ ಸುರಭಿಯ ಕರೆದಭಿಷೇಕÀವನೆ ಕೊಂಡ
ಲೇಸಿನಿಂದಲಿ ಮೊಲೆಯುಂಡು ಬೆಳೆದನು
ವಾಸವನುತ ದೇವೇಶನ ಪಾಡುತ
ವಾಸವಾದರು ಮಳೂರಿನಲಿ||1||
ಆ ಶಂಕುಕÀರ್ಣನೇ ಶೇಷಾವೇಶದಲ್ಲಿ
ಶ್ರೀಶನ ಕÀಂಭದಿ ತೋರಿಸಿದಾತನೆ
ತಾ ಸುಮ್ಮಾನದಿ ನರಸಿಂಹನ ಪೂಜೆಗೆ
ತಾಸು ಬಿಡದೆ ಆಸೆ ತೀರಿಸಿದಾತನೆ
ಈಸು ಮಹಿಮೆಗೆ ವ್ಯಾಸ ನಾಮಕರಣವು
ಆ ಸುಮನೋಯತಿ ಆಶೀರ್ವಾದವಮಾಡೆ
ತಾ ಸುಮ್ಮನಿರದಲೆ ಕೃಷ್ಣನ್ನ ಸ್ಮರಿಸುತ್ತ
ಈ ಶಿಶುಬೆಳೆಯೆ ಆಭರಣದಿ ಶೋಭಿತ
ವೀ ಸುಮತಿಯ ಮಂಗುರುಳಿಗೆ ಮುತ್ತಿನ ಗೊಂಡೆ
ಆ ಸುಮನೋಹರಗಳೆಲೆ ಮಾಗಾಯಿ
ಭೂಸುರ ನಿಕರವ ಮೋಹಿಪ ಬಗೆವಂಟಿ
ಭೂಸುರ ಕರ್ಣಕೆ ಚಳತುಂಬು ಬಾವಲಿ
ನಾಸಿಕಛಂದವು ಪದ್ಮವಿಕಸಿತ ಮುಖನೇತ್ರ
ಆ ಸೂರ್ಯ ಕಾಂತಿಯ ಮುಖ ಫಣೆ ತಿಲಕನ ನೃ
ಕೇಸರಿ ಪ್ರಾಯಗೆ ಹಾರಪದಕÀವಿಟ್ಟು
ಆ ಸುಕರಗಳಲಿ ಉಂಗುರ ಪೊಳೆಯುತ
ಆ ಸುಕಾಂತಿಯ ಕಡಗ ಸರಪಳಿ ವಂಕಿಯೂ
ಲೇಸು ವಡ್ಯಾಣವ ನಡುವಿಗೆ ಧರಿಸಿ
ಆ ಸಣ್ಣ ಪಾದಕ್ಕೆ ಗೆಜ್ಜೆ ಕಾಲ್ಗಡಗವು
ಈ ಶಿಶುವಿನ ಹರಿ ಆಡಿಸುವಾ ||2||
ವರ್ಷವೈದಕೆ ಚೌಲ ಅಕ್ಷರಾಭ್ಯಾಸ
ಆರನೆ ವತ್ಸರ ಉಪನಯನ ಮಾಡಿ
ಧೀರಗೆ ಸಪ್ತ ವರ್ಷಕೆ ತುರ್ಯಾಶ್ರಮ
ಕಾರುಣ್ಯದಿಂದ ಶ್ರೀಪಾದರಾಯರಲ್ಲಿ
ಅರುಹಿಸಲು ವೇದಶಾಸ್ತ್ರ ನಿಗಮಪಾಠ
ಸಾರವ ತರ್ಕತಾಂಡವ ಚಂದ್ರಿಕೆಯ ಮಾಡಿ
ಸೂರಿಶಿಷ್ಯ ವಾದಿರಾಜನ್ನ ಪಡೆದೆಯೋ
ಶೂರಕೇಸರಿಯಂತೆ ವಾದಿದಿಗ್ಗಜಗಳ
ಧಾರಿಣಿಯಲ್ಲಿ ತಲೆ ಎತ್ತದಂತೆ ಮಾಡಿ
ನೂರೆಂಟು ಮಂದಿ ಶೂರವಾದಿಗಳಿಂದ
ಧೀರ ಜಯಪತ್ರಿಕೆ ಕೊಂಡು ವಾರಿಧಿ ಕಟ್ಟಿ
ಮಾರುತಿಯನು ಪ್ರತಿಷ್ಠೆಯ ತಾಮಾಡಿ
ಶ್ರೀ ರುಕ್ಮಿಣಿಪತಿ ಗೋಪಾಲ ಕೃಷ್ಣನ
ಸಾರಸಾಕ್ಷನ ಸೇವೆ ಅನುದಿನವು ಮಾಡಿ
ತೋರಿ ಪುರಂದರ ದಾಸರಿಗಂಕಿತಾ
ಪಾರ ಕುಹುಯೋಗವ ನೂಕಿ ಭೂಷತಿಯನು ಕಾಯ್ದ
ಪಾರ ಮಹಿಮೆ ಫಾಲ್ಗುಣ ಬಹುಳ ಚೌತಿಯು
ಶ್ರೀ ರಮಣನ ಪುರಿಯಾತ್ರೆಗೆ ರಥವೇರಿ
ತೋರಿದ ವರದ ವಿಜಯವಿಠ್ಠಲನಾ ಪಾ
ಸೇರೀದರಿವರು ಆನಂದದಿ * ||3||
* ಈ ಕೀರ್ತನೆ ವರದ ವಿಜಯವಿಠಲಾಂಕಿತದಲ್ಲಿ ದಾವಣಗೆರೆಶ್ರೀನಿವಾಸದಾಸಕೃತ ವ್ಯಾಸರಾಜ ಚರಿತೆಯಲ್ಲಿ ಉಪಲಬ್ಧವಿದೆ.