ಪಂಪಾಪುರಾಧಿಪ ಶ್ರೀ ವಿರೂಪಾಕ್ಷ ನೀ ಪಾಲಿಪುದೆಮ್ಮನು
ಕಾಪಾಡುವುದು ಶ್ವೇತ ದ್ವೀಪಾವಾಸನ ತೋರಿ
ಸರ್ಪಭೂಷಣ ದೇವ ತ್ರಿಪುರಸಂಹಾರ
ಭಾಪುರೆ ಸುರಕುಲ ದೀಪ ಸದಾಶಿವ
ಶ್ರೀಪತಿ ಪಾದ ಸಮೀಪದ ಸೇವಕ
ಹರಿಪಾದೋದಕ ಶಿರದಲಿ ಧರಿಸಿದ
ಹರಿಕಥಾಮೃತ ಮಳೆಗರೆವೆ ನೀ
ಕರುಣಿ ಸಂಕರುಷಣನ ಚರಣಾಬ್ಜ ಧೂಳಿ ಶ-
ರೀರ ಲೇಪನದಿಂದ ವರ ತೇಜಯುತನೆ
ಮುರಹರಗೆರಗದ ನರನಿಗೆ ನರಕವು
ಸ್ಥಿರವೆಂದು ಸುರವರ ಭೇರಿ ಭೋರಿಡುತಿರೆ
ನಿರುತ ಅವನ ಪದ ಮೆರೆಯದೆ ಮನಗೊಂಡೆ
ಶರಣು ಅಮರನುತ ಗುರು ಶಿರೋಮಣಿಯೆ||1||
ದೇಶಕ್ಕೆ ದಕ್ಷಿಣ ಕಾಳಿಯೆನಿಸುವ ವಿ-
ಶೇಷ ಸ್ಥಳದೊಳು ವಾಸವಾಗಿ ಅ-
ಶೇಷ ಜನರನ್ನು ಲೇಸಾಗಿ ಸಲಹುವಿ
ವಾಸವಾದಿ ಅನಿಮೇಷ ವಂದಿತನೆ
ದೋಷನಾಶನ ಸಂತೋಷದಿ ಗಿರಿಜೆಗೆ
ಶ್ರೀಶನ ಮಂತ್ರೋಪದೇಶವ ಮಾಡಿದೆ
ದಾಶರಥಿಯ ನಿಜದಾಸರೆನಿಸುವರ
ಪೋಷಿಪೆ ಶಿವ ಪರಮೇಶ ಕೃಪಾಳೊ ||2||
ಕಂದುಗೊರಳ ಜೀಯ ಸಿಂಧೂರ ಮೊಗನಯ್ಯ
ಕಂದರ್ಪಹರ ಭಕ್ತಬಾಂಧವ ಕಾಯೊ
ಇಂದಿರೆರಮಣ ಗೋವಿಂದನ ಪಾದಾರ-
ವಿಂದ ಭೃಂಗನೆ ಭವದಿಂದ ಕಡೆಗೆ ಮಾಡೊ
ನಂದಿವಾಹನ ಎನ್ನ ಹಿಂದಣ ಕಲುಷಿತ
ವೃಂದಗಳೋಡಿಸುವ ಇಂದುಧರ ಅರ-
ವಿಂದನಯನ ಸಿರಿ ವಿಜಯವಿಠ್ಠಲನಕುಂದದೆ
ಭಜಿಪ ಆನಂದವ ಕರುಣಿಸು ||3||