ನೋಡಿರಣ್ಣ ನೀವೆಲ್ಲ ಬಂದು ಈ ನೂತನ ಮಾನವನ|
ತ್ಯಾಗ-ವಿವೇಕದ ಚೀಲಗಳೆರಡನು ಹೆಗಲಲಿ ಹೊತ್ತಿಹನ||
ಗಂಗೆಯ ದಡದಲಿ ಹೊರಳುತ ‘ತಾಯೀ’ ಎನ್ನುತ ಕೂಗುವನು|
‘ಕಾಣದೆ ನಿನ್ನನು ದಿನಗಳುರುಳುತಿವೆ’ ಎನ್ನುತ ಮರುಗುವನು||
ನಂಬದ ನೆಚ್ಚದ ಮಂದಮತಿಗಳಿಗೆ ಸರಳಕಥೆಯ ಹೇಳಿ|
ಕಾಳಿಯು ಕೃಷ್ಣನು ಒಂದೇ ಎನ್ನುತ ಸಾರುತಿಹನು ಕೇಳಿ||
ಅಕ್ವಾ-ವಾಟರ್-ಪಾನಿ-ವಾರಿಗಳು ನೀರಿಗೊಂದೆ ಹೆಸರು|
ಅಲ್ಲಾ-ಜೀಸಸ್-ಮೋಸೆಸ್-ಕಾಳಿಯರು ಪರಬ್ರಹ್ನನುಸಿರು||
ಪಂಡಿತ-ಪಾಮರ-ಬಡವನು-ಬಲ್ಲಿದ ಭೇದ ತೋರಲಿಲ್ಲ|
ಜಾತಿಮತಗಳಾ ರೀತಿನೀತಿಗಳ ಮನಕೆ ತಾರಲಿಲ್ಲ||
ದಿವ್ಯೋನ್ಮಾದದಿ ಬಾಹುಗಳೆರಡನು ಬೀಸಿ ಕರೆಯುತಿಹನು|
ತಾಮಸಗೈಯದೆ ಎಲ್ಲರು ಬೇಗನೆ ಬನ್ನಿರೆನ್ನುತಿಹನು||
ಜಗದ ಜನಗಳಿಗೆ ಕೃಪೆಯನು ತೋರಲು ಕಾತರಗೊಂಡಿಹನು|
ಭವಸಾಗರವನು ದಾಟಿಸೆ ನೌಕೆಯ ತಂದು ಕಾಯುತಿಹನು||
—-ಮುರಳೀಧರ