ಧನ್ಯನೋ ಶೇಷಗಿರಿದಾಸ ನೀನೂ
ಪುಣ್ಯವಂತನು ಅಹುದೊ ಮನೊ ವಾಚದಲಿ ನಿತ್ಯ
ಮುಂಗೈಯ ಮ್ಯಾಲಿನ ಗಿಳಿ ಹಾರಿಹೋದಂತೆ
ರಂಗ ಮಧ್ವನ ಸ್ಮರಣೆ ಮಾಡಿಕೊಳುತ
ಮಂಗಳಾಂಗನಾಗಿ ಸ್ವರ್ಗಸ್ಥನಾದಿ ಕ್ಷಣ
ಭಂಗುರವೆಂಬ ಪ್ರಮಾಣ ಸಿದ್ಧಿಸಿತು ಗಡ ||1||
ಸತ್ಶಿಷ್ಯನೆಂದೆನಿಸಿಕೊಂಡದಕೆ ಎನ್ನ ಮ
ನೋತ್ಸಾಹ ಮಾತ್ರ ಬಂದಾಗಲಿಲ್ಲಾ
ವತ್ಸ ಕೇಳು ಉಪಸರ್ಗ ಕೂಡಿದ ನಾಭಿ
ತತ್ಸಮಾನಾಯಿತೊ ಇಂದಿನಾರಭ್ಯವೂ||2||
ಒಂದೆ ಪ್ರವಾಹದೊಳು ಈಸು ಬೀಳಲು ಸುಳಿ
ಯಿಂದ ಹಿಂದಕೆ ಒಬ್ಬನಿಂದಂತೇವೆ
ಇಂದು ಎನಗಾಯಿತೊ ಭೂಮಿಯೊಳಗೆ ಋಣಾನು-
ಬಂಧ ಇಂತಿರಲಿಕ್ಕೆ ಯತ್ನ ಒಬ್ಬರದಿಲ್ಲ||3||
ಪರಿಣಾಮಕೆ ನಿನಗೆ ಸಾನುಕೂಲಾವಾಗಿ
ಅನಿಲದೇವನು ಒಲಿದು ಹರಿಯ ಕೂಡಾ
ಪ್ರಣಮಪೂರ್ವಕದಿಂದ ಪಂಚತ್ವ ಐದಿದೆ ಸಾ-
ಧನ ಪೂರ್ತಿಕಾಲ ಎಳ್ಳನಿತು ಉಳದಿಪ್ಪದೊ ||4||
ವಿಧಿ ಸಂವತ್ಸರ ಭಾದ್ರಪದ ಶುಕ್ಲದ ಭಾನು
ಬಿದಿಗೆಯಲಿ ಪ್ರವರ ಗೌತಮ ಸಂಗಮಾ
ನಿಧಿಯಲಿ ವಿಜಯವಿಠ್ಠಲನಂಘ್ರಿಯುಗಳವನು
ಹೃದಯದಲಿ ಇಟ್ಟು ದೇಹವ ತ್ಯಾಗಮಾಡ್ದೆ ||5||