ದೊರಕಿತು ಧರಣಿಗೆ ಸಿರಿವರ ಇಂದು
ಕರುಣೆಯ ಮೂರುತಿ ಶಾರದೆ ಬಂದು|
ಪರಮ ಗುರುವಿನ ಶಕ್ತಿಯ ಸಿಂಧು
ಪೊರೆವಳು ಸರ್ವರ ಹೃದಯದಿ ನಿಂದು||
ಕಲಿಯುಗದಾರ್ತರ ನೋಡುತ ನೊಂದು
ಒಲುಮೆಯ ಸುರನದಿ ತನ್ನಲಿ ಮಿಂದು|
ಕಲುಷವ ಕಳೆಯುತ ಬೆಳಗಲಿ ಎಂದು
ಸುಲಭದ ಸಾಧನೆ ಸಾರವ ತಂದು||
ನಿರ್ಮಲ ಮೂರುತಿ ನಿಷ್ಕಲ ಇಂದು
ಕರುಣಿಸು ಒಂದೇ ಪ್ರೇಮದ ಬಿಂದು|
ಪರಹಿತ ಜೀವಿತೆ ಸರ್ವರ ಬಂಧು
ಮೊರೆಯುವೆ ನಿನ್ನಲಿ ಕೃಪೆ ತೋರೆಂದು||
—-ಸ್ವಾಮಿ ಶಾಸ್ತ್ರಾನಂದ