ದಾಸ ದಾಸ ದಾಸರ ದಾಸ್ಯವ

ದಾಸ ದಾಸ ದಾಸರ ದಾಸ್ಯವ ಕೊಡೊ-
ದೋಷ ರಾಸಿಯಳಿದು
ಶ್ರೀಶ ಧೀಶ ಸರ್ವೇಶ ಸುರೇಶ್ವರ –
ಭಾಸುರ ಗುಣಗಣ ಭವ್ಯ ಶರೀರ

ಚಿತ್ತ ನಿನ್ನ ಪದ ಸೇವೆಯೊಳಿರಲಿ-ಚಿಂತೆ ಇತರ ಬಿಡಲಿ
ಅಂತರಂಗದಲ್ಲಾನಂದಿಸಲಿ-ಅಹಂಕೃತಿಯನ್ನೆ ಬಿಡಲಿ
ಸಂತತ ನಿನ್ನ ಪದ ಪಂಕಜ ಭಕ್ತರ –
ಪಂಥವ ಪಾಲಿಸೊ ಪರಮ ಪುರುಷ ಹರಿ ||1||

ಅರಿಷಡ್ವರ್ಗಗಳಟವಿಯ ಖಂಡಿಸು-ಆನಂದದಲಿರಿಸು
ದುರುಳರ ಸಂಗವ ದೂರ ಮಾಡಿಸು-
ದುರ್ಮತಿಯನೆ ಬಿಡಿಸು
ಸರಸ ಸಂಭ್ರಮ ಸನ್ನುತ ಭಕುತರೋಳ್-
ನಿರುತವು ನಿಲ್ಲಿಸೋ ನೀರಜಾಕ್ಷ ಹರಿ||2||

ತ್ರಿಜಗನ್ಮೋಹನಾಕಾರ ತ್ರಿ-ಗುಣಾತೀತ ತೀರ್ಥಪಾದ
ಭಜಕರ ಪಾವನ ಭವನುತ ಚರಣ-ಋಜಗಣನುತಾಭರಣ
ವಿಜಯವಿಠ್ಠಲಾಧೀಶ ವಿಶ್ವೇಶ್ವರ ಕುಜನ
ವಿದಾರಣ ಕೋವಿದನುತ ಹರಿ ||3||

Leave a Comment

Your email address will not be published. Required fields are marked *