ಕಲಿಯುಗದಲಿ ಹರಿನಾಮವ ನೆನೆದರೆ
ಕುಲಕೋಟಿಗಳುದ್ಧರಿಸುವವೋ ರಂಗಾ||
ಸುಲಭದ ಮುಕ್ತಿಗೆ ಸುಲಭನೆಂದೆನಿಸುವ
ಜಲರುಹನಾಭನ ನೆನೆ ಮನವೆ||
ಸ್ನಾನವನರಿಯೆನು ಮೌನವನರಿಯೆನು
ಧ್ಯಾನವನರಿಯೆನೆಂದೆನಬೇಡ|
ಜಾನಕಿವಲ್ಲಭ ದಶರಥನಂದನ
ಗಾನವಿನೋದನ ನೆನೆ ಮನವೆ||
ಅರ್ಚಿಸಲರಿಯೆನು ಮೆಚ್ಚಿಸಲರಿಯೆನು
ತುಚ್ಛನು ನಾನೆಂದೆನಬೇಡ|
ಅಚ್ಯುತಾನಂತ ಗೋವಿಂದ ಮುಕುಂದನ
ಇಚ್ಛೆಯಿಂದ ನೀ ನೆನೆ ಮನವೆ||
ಜಪವೊಂದರಿಯೆನು ತಪವೊಂದರಿಯೆನು
ಉಪದೇಶವಿಲ್ಲೆಂದೆನಬೇಡ|
ಅಪಾರ ಮಹಿಮ ಶ್ರೀ ಪುರಂದರವಿಟ್ಠಲನ
ಉಪಾಯದಿಂದಲಿ ನೆನೆ ಮನವೆ||
—ಪುರಂದರದಾಸ