ಶೋಕವ್ಯಾತಕೆ ಮನವೆ ನಿನಗೆ ಇನ್ನು

ಶೋಕವ್ಯಾತಕೆ ಮನವೆ ನಿನಗೆ ಇನ್ನು
ಈ ಕುಮಾರಕ ನಿನಗೆ ಗತಿಯ ವಿಧಿಸುವನೇನೊ

ಕೃಷ್ಣ ಸೋದರಮಾವ ಮತ್ತೆ ಭೀಮಸೇನ
ಜೇಷ್ಠ ಪಿತೃ ಪಾರ್ಥಾದಿ ಮಹಧೀರರು
ಇಷ್ಟು ಮಂದಿರಲಾಗಿ ಅಭಿಮನ್ಯು ಪ್ರಾಣವನು
ಬಿಟ್ಟು ಹೋಗಲು ಒಬ್ಬರಾದರುಳುಹಿದರೇನೊ ||1||

ವಸಿಷ್ಠ ಮುನಿಪರಿಗೆ ನೂರುಮಂದಿ ಸುತರು
ಅಸಮ ಸಾಸಿಗರು ಮಹ ಶೀಲಜ್ಞರು
ಕುಶಲದಿಂದಿರುತಿರ್ದು ಅ-ಕಾಲ ಮೃತ್ಯುವಿನ
ವಶರಾಗಿ ಪೋದರು ನೋಡಿ ಅಚ್ಚರಿಯ||2||

ಇಂಥವರಿಗೀ ರೀತಿ ನಿನಗಾವ ಸ್ವಾತಂತ್ರ್ಯ
ಸಂತೋಷವನು ತೊಡೋ ಮನಸಿನಲ್ಲಿ
ಕಂತು ಜನಕ ನಮ್ಮ ವಿಜಯವಿಠ್ಠಲನಂಘ್ರಿ
ಸ್ವಾಂತದಲ್ಲಿ ನೆನೆನೆನೆದು ಸುಖಿಯಾಗು ಮನವೆ||3||

Leave a Comment

Your email address will not be published. Required fields are marked *