ರಾಮಕೃಷ್ಣ ತಪೋಸೂರ್ಯ
ಕಿರಣಬಿಂಬ ಚಂದ್ರಿಕೆ
ಓ ತಾಯಿ ಅಂಬಿಕೆ||
ಗಿರಿಯ ದರಿಯ ನೆಲವ ಜಲವ
ತಬ್ಬಿ ನಿಂತ ಕರುಣೆಯೆ
ವಾತ್ಸಲ್ಯವರಣೆಯೆ||
ರಾಮಕೃಷ್ಣ ತಪೋವನದ
ಪರ್ಣಕುಟಿಯ ದೀಪವೆ|
ಬಳಿಗೆ ಬಂದ ಹಣತೆಗಳಿಗೆ
ಬೆಳಕನಿತ್ತ ಕಿರಣವೆ
ಮೌನಪ್ರಭಾವಲಯವೆ||
ಸಂಕಟಗಳ ವನವಸನವ-
ನುಟ್ಟು ನಿಂತ ಶಿಖರವೆ|
ನದನದಿಗಳ ವಾತ್ಸಲ್ಯದ
ಹಾಲೂಡಿದ ತೀರ್ಥವೆ
ದಿವ್ಯ ಕೃಪಾರೂಪವೆ||
—-ಜಿ.ಎಸ್. ಶಿವರುದ್ರಪ್ಪ