ಭಕ್ತಿಯಲಿ ನಡೆವರಿವರೇ ಸುಗುಣರೊ

ಭಕ್ತಿಯಲಿ ನಡೆವರಿವರೇ ಸುಗುಣರೊ
ಮುಕ್ತಿಯನು ಬಯಸಿ ಮುರಾರಾತಿಯ ಚರಣದಲ್ಲಿ

ಉದಯದಲೆದ್ದು ಉನ್ನತ ಸ್ವರದಿಂದ ಹರಿ
ಪದವೇ ಗತಿ ಎನುತಾ ಎಲ್ಲ ಕಾಲಕೆ
ಉದರ ಚಿಂತಿಯ ಮರೆದು ಮನ ಉಬ್ಬಿ ಉತ್ಸವದಿ
ಪದೋಪದಿಗೆ ಮಂಗಳಾವಾರ್ತಿ ಪೇಳುತ ನಿತ್ಯಾ ||1||

ಅಡಿಬಿಡದೆ ಭಾಗವತ ಮಿಕ್ಕ ಪುರಾಣಾದಿ
ನುಡಿಗೆ ಕಿವಿಗೊಟ್ಟು ಹಾಹಾ ಎನತಲಿ
ಒಡನೊಡನೆ ಹರಿ ಮಹಿಮೆಯಲಿ ಇದ್ದು ಮಾರಿಗಳ
ಅಡಿಮಾಡಿ ಆದ್ಯಂತಕಾಲ ಸುಖಿಸುವ ನಿತ್ಯಾ ||2||

ಈ ದೇಹ ತ್ಯಾಗ ಮಾಡದೆ ಆಗಲಿ ಪಂಚ
ಭೇದ ಪೇಳುವದು ಬಿಡೆನೆಂಬೊ ಸೊಲ್ಲು
ಆದಿತ್ಯ ಲೋಕಕ್ಕೆ ಮುಟ್ಟುವಂತೆ ಕೂಗಿ
ಸಾಧನ ಮಾಡುತಲಿಪ್ಪ ಶುಭಮಾರ್ಗದಲಿ ನಿತ್ಯಾ ||3||

ಅವಾವ ಮೋಹಕವು ಶಾಸ್ತ್ರದಲ್ಲಿದ್ದರೂ
ಭಾವದಲಿ ಗುಣಿಸದೆ ನಿಕ್ಕರಿಸೀ
ದೇವದೇವೇಶನೆ ಬ್ರಹ್ಮಾದಿಗಳು ವಂಚಿಪ
ಕಾವ ಕೊಲ್ಲುವನೀತನೆಂದು ತಿಳಿದು ನಿತ್ಯಾ ||4||

ಅನ್ಯಶಬ್ದವು ಅನ್ಯಸ್ಪರಿಶ ರೂಪಕ ರಸಾ
ಅನ್ಯಗಂಧಗಳಿಗೆ ಇಂಬುಗೊಡದೇ
ಧನ್ಯರಾಗಿದ್ದವರ ಕರುಣ ಸಂಪಾದಿಸಿ
ಪುಣ್ಯಭೂಮಿಯನು ಹಾರೈಸುವ ನಿತ್ಯಾ ||5||

ಅವೈಷ್ಣವನು ಹರಿ ಎಂದು ನುಡಿವಡೆ ತಾನು
ಅವನಂತೆ ಸ್ಮರಿಸದೇ ಸುಮ್ಮನಿದ್ದೂ
ಭವವದ್ದು ಭಾಗ್ಯವನು ಅಪೇಕ್ಷಿಸದೇ ಮುಂದೆ
ಜವನ ದೂತರಿಗೆ ಮಹ ಭೀತಿ ತೋರುತ ನಿತ್ಯ ||6||

ಭೂಸುರರ ಪಾದದಲಿ ವಿಶ್ವಾಸ ಇಟ್ಟು ದು
ರಾಶೆಯನು ಮಾಡಿ ನರರಾಶ್ರೈಸದೆ
ಏಸೇಸು ವಿಪತ್ತು ಗುಣ ಮೇಲಟ್ಟಿದರು
ಲೇಶವಾದರು ಧೈರ್ಯಗೆಡದೆ ಮತಿಯಲಿ ನಿತ್ಯ ||7||

ಕಾಲ ಮೃತ್ಯು ಬಂದು ಹುಂಕರಿಸಿ ನಿಂದು ಮಹ
ಜ್ವಾಲೆಯನು ತೋರಿ ಕಠಿಣೋಕ್ತಿಯಲ್ಲೀ
ಏಳೇಳು ಎನುತ ಎಬ್ಬಿಸಿದ ಕಾಲಕೆ ತನ್ನ
ನಾಲಿಗೆಲಿ ಹರಿ ಕೃಷ್ಣ ಕೇಶವನೆನುತ ನಿತ್ಯಾ ||8||

ಸಕಲ ಚೇಷ್ಟಾದಿಗಳು ಹರಿಮಾಡಿಸಲು ಉಂಟು
ಮುಕುತಿ ನರಕವೆಂಬ ಯೋಚನ್ಯಾಕೆ
ಭಕುತವತ್ಸಲ ಸಿರಿ ವಿಠ್ಠಲನಲ್ಲಿ
ಸುಖ ದು:ಖವಿತ್ತದು ಸಮ್ಮತವೆನುತ ನಿತ್ಯಾ ||9||

Leave a Comment

Your email address will not be published. Required fields are marked *