ಬೇಸರದೆ ಭಜಿಸಿರೋ ಪುರಂದರ ದಾಸರಾಯರ
ಶ್ರೀಶ ನಿಮ್ಮನು ಉದಾಶೀನ ಮಾಡದೆ
ಪೋಷಿಸುವ ಸಂತೋಷದಿಂದಲಿ
ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ
ಪರಿಪರಿಯ ಸೌಖ್ಯಗಳ ಸುರಿಸುತ್ತ
ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ
ಕರುಣದಲಿ ಅವರುದ್ಧ್ದರಿಸಲೋಸುಗ ಮನೆಗೆ
ಪೋಗುತ್ತ ಯಜಮಾನ ಕಂಡು
ಜರಿದು ಬ್ರಾಹ್ಮಣನ್ಹೊರಗೆ ಹಾಕಲು
ಮರುದಿವಸ ಮತ್ಹೋಗಿ ನಿಂತ ||1||
ಭಾರಿಭಾರಿಗೆ ಸಾವುಕಾರನ
ಮೋರೆಗ್ಹೊತ್ತಿ ಮೇರೆಯಿಲ್ಲದೆ
ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ
ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು
ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು
ಡ್ಡಾರಿಸಿಕೋ ಎಂದು ಹೇಳಲು ನಾರಾಯಣ ಬಿಟ್ಹೋದ ನಗುತ||2||
ಹಿತ್ತಲಾ ಬಾಗಿಲಿಗೆ ಹೋಗಿ ಮತ್ತೆ ಆತನ ಮಡದಿಗಾಗಿ
ಹತ್ತಿ ಬಿದ್ದನು ವಿತ್ತ ತಾ ಯೆನುತ ತನ ಮಗನ ಮುಂಜ್ಯೆಂ
ದೆತ್ತಿ ಕರದಿಂ ಬಾಯಿ ತೆರೆಯುತ್ತ ಆ ಪ್ರಾಣಿ ನುಡಿದಳು
ಎತ್ತಣ ದ್ರವ್ಯವು ತನಗೆನುತ ನಿನ್ನ ಮೂಗಿನ
ಮುತ್ತಿನ ಮೂಗುತಿಯ ಕೊಡು ಎನೆ
ಉತ್ತುಮಳು ತೆಗೆದಿತ್ತಳಾಕ್ಷಣ ||3||
ಜೋಕೆಯಿಂ ಮೂಗುತಿಯನೊಯ್ದು
ಆಕಿ ಗಂಡನ ಕಣ್ಣೆದುರಿಗೆ ಹಾಕಿದನು ತಾ
ಪಾಕಿ ಕೊಡೆಯೆನುತ ಅದು ಕಂಡು ಇದು ನ
ಮ್ಮಾಕಿದೆಂದು ಈತ ನುಡಿಯುತ್ತ ಅನ್ಯರದು ಯಿಂಥಾ
ದ್ಯಾಕೆ ಯಿರಬಾರದೆನ್ನುತ್ತಾ ಬೆಲೆ ಹೇಳು ಎನಲು
ನಾಕು ನೂರು (ಪಾಕಿ) ಶುಭ್ರ ಕೊಡು
ಎಂದಾಕೆ ಹೋದನು ತಿರೂಗಿ ಬಾರದೆ ||4||
ತಿರುಗಿ ಬ್ರಾಹ್ಮಣ ಬಾರದಿರಲು ಕರೆದು ತನ್ನ ಹೆಂಡತಿಯ
ಬರಿಯ ನಾಶಿಕವನ್ನೆ ಕಂಡುನು ಮೂಗುತಿಯ ಎಲ್ಲೆನೆ
ಮುರಿದಿಹುದು ಯೆಂದಾಕೆ ಹೇಳಲು ಒಳಗ್ಹೋಗಿ ನೀ ತಾರದಿರೆ
ಅರೆವೆ ನಿನ್ನಯ ಜೀವವೆಂದನು ವಿಷಕೊಂಬೆನೆಂದು
ಕರದಿ ಬಟ್ಟಲು ಧರಿಸಲಾಕ್ಷಣ
ತ್ವರಿತದಲಿ ಹರಿ ಅದರೊಳಾಕಿದ ||5||
ಹರುದಿಂ ಮೂಗುತಿಯನ್ನು
ಪುರುಷನಾ ಕೈಕೊಳಗೆಯಿಡಲು
ತರಿಸಿ ತನ್ನಲ್ಲಿದ್ದ ಪೆಟ್ಟಿಗೆಯಾ ಅದು ಕಾಣದಿರಲು
ಬೆರಗಾಗಿ ನೋಡಿದನು ಮಡದಿಯ ನಿಜ ಪೇಳುಯೆನಲು
ಅರಸಿ ಪೇಳ್ದಳು ಕೊಟ್ಟ ಸುದ್ದಿಯಾ ಅಭಿಮಾನಕಂಜಿ
ಅರದು ವಿಷವನು ಕುಡಿವೆನಲು ಸಿರಿರಮಣಾ ಕೊಟ್ಟ ಖರಿಯಾ ||6||
ದೇವ ದೇವನು ಎನ್ನ ಮನದ
ಭಾವವನ್ನು ತಿಳಿವುದಕೆ ತಾ ವೃದ್ಧ ಬ್ರಾಹ್ಮಣನಾಗಿ
ಬಂದಿದ್ದ ಪರಿಪಕ್ವವೆನಗೆ
ನ್ನಾವ ಕಾಲಕೆ ಆಗಬೇಕೆಂದ ವೈರಾಗ್ಯಭಾವದಿ
ಜೀವಿಸಿಕೊಂಡಿರುವುದೇ ಛಂದ ಹೀಗೆನುತ ಮನೆ ಧನ
ಕೋವಿದರ ಕರೆದಿತ್ತ ಹರುಷದಿ
ಕಾವನಯ್ಯನ ದಾಸನಾದ ||7||
ಲಕ್ಷ್ಮಿಪತಿಯ ಪಾದದಲ್ಲಿ ಲಕ್ಷ್ಯವಿಟ್ಟು ವ್ಯಾಸರಾಯರ
ಶಿಕ್ಷೆಯಿಂದಲಿ ಅಂಕಿತವ ಕೊಳುತ ತಿರಿಪಾದ ಐದು
ಲಕ್ಷಪದ ಸುಳಾದಿ ಪೇಳುತ್ತ ಪ್ರತಿದಿವಸದಲ್ಲು
ಪಕ್ಷಿವಾಹನ ನಾಟ್ಯವಾಡುತ ಅಪರೋಕ್ಷ ಪುಟ್ಟಲು
ಮೋಕ್ಷಸ್ಥಾನಕ್ಕೆ ಕರೆದೊಯ್ದು ಅ
ಧೋಕ್ಷಜನು ಸಂರಕ್ಷಿಸಿದ ||8||
ಘೊರ ನರಕದೊಳಗೆ ಬಿದ್ದಾ
ಪಾರ ಜನರು ಚೀರುತಿರಲು
ದ್ಧಾರ ಮಾಡಿದ ನಾರದಾರಿವರು ಅವ
ತಾರ ಮಾಡಿ ಧಾರುಣಿಯಲಿ ಮತ್ತೆ ಬಂದರು ಸರುವೋತ್ತಮ
ಹರಿ ನಾರಾಯಣನೆ ಎಂದು ಸಾರಿದರು ಹೀಗೆಂದು ತಿಳಿಯಲು
ಮಾರ ಜನಕ ವಿಜಯವಿಠ್ಠಲ ಆರಿಗಾದರು ಒಲಿವ ಕಾಣಿರೊ ||9||