ನೋಡಿದೆನು ಉಡುಪೀ ನಿವಾಸನ

ನೋಡಿದೆನು ಉಡುಪೀ ನಿವಾಸನ
ನೋಡಿದೆನು ಯಾದವೇಶನ
ನೋಡಿದೆನು ಮಾನಿಸ ವೇಷನ
ನೋಡಿದೆನೊ ಲಕುಮೇಶನ

ಪರಶುರಾಮನು ಭೂಮಿ ಸುರರಿಗೆ
ಸರವು ಧಾರುಣಿ ಧಾರಿಯಾ ಎರದು
ಕೇಸರಗಿರಿಯ ಪಡುಮೂಲ
ಶರನಿಧಿಯನು ಶರದಲೀ
ಭರದಿ ಬಿಡಿಸಿದ ಶೂರ್ಪಕಾರದ
ತೆರದಿ ನೆಲ ನೀ ಧರುಣಿಗೆ
ಪರಮ ಸಾಹಸ ರಾಮಭೋಜನು
ಅರಸನಾದುದು ನೋಡಿದೆ ||1||

ಯಾಗಗೋಸುಗ ರಾಮ ಭೋಜನು
ನೇಗಿಲಿಯ ಕೊನೆಯಿಂದಲಿ
ಆಗ ಭೂಮಿಯ ಶೋಧಿಸಲು ಬಂದು
ನಾಗ ಬಂದಿತು ಮೃತವಾಗಿ
ತೂಗಿ ಶಿರವನು ಭೃಗು ಕುಲೇಶಗೆ
ಬಾಗಿ ನೆನೆಯಲು ಸಂಕೇತಾ
ಸಾಗಿ ಭೂಮಿಪಾಲ ರಿಪು
ಚನ್ನಾಗಿ ಒಲಿದದು ನೋಡಿದೆ ||2||

ತಿಳುಹಿದನು ಪೂರ್ವದಲಿ ಈ ಫಣಿ
ಖಳನು ಕಾಣೊ ಇವನಿಂದು
ಅಳಿದು ಪೋದದು ಲೇಸು ಭೂಸುರ
ಕುಲಕೆ ಸಂತೋಷವಾಯಿತು
ಒಲುಮೆಯಲಿ ಸತ್ಕಾರ ವಿಧ ವೆ
ಗ್ಗಳವಾಗಿ ಸುಯಾಗವ
ಸುಲಭ ಮನದಲಿ ಮಾಡೆನಲು ನಿ
ಶ್ಚಲ ಭಕುತಿಲಿ ಸ್ತುತಿಸಲು ||3||

ಇಂದಿರಾಪತಿ ಕರುಣಿಸೆಂದು
ಅಂದಿಗಾ ರಾಮ ಭೋಜನು
ಒಂದು ಕ್ರೋಶದ ಅಗಲ ರಜತಾ
ಚಂದದಾಸನ ಮಾಡಿಸಿ
ತಂದು ದೇವನ ಕುಳ್ಳಿರಿಸಿ ಆ
ನಂದದಲಿ ಓಲಾಡುತಾ
ಕುಂದದಲೆ ಮೇಧವನು ಮುಗಿಸಿ ಗೋ
ವಿಂದನ ಪ್ರೀತಿಪಡಿಸಿದಾ ||4||

ಭೂತಳದೊಳು ರಜತಪೀಠಾಖ್ಯ
ಖ್ಯಾತಿ ಆಯಿತು ಸರ್ವದಾ
ಆ ತರುವಾಯದಲ್ಲಿ ಭಾರ್ಗವ
ಭೂತನಾಥನ ನಂದದಿ
ವಾತ ಭಕ್ಷನ ನಡುವೆ ನಿಂದನು
ಮಾತುಯಿದು ಪುಶಿಯಲ್ಲವೊ
ಪೂತುರೆ ಮೋಹಕವೆ ತೋರಿದ
ಜಾತ ರಹಿತಗೆ ನಮೋ ನಮೋ ||5||

ಇಂತು ಈ ಪರಿ ಇರಲು ಗಂಗೆಯ
ಕಾಂತ ಮಹಾ ತಪವನೆ ಮಾಡಿ
ಸಂತತ ಗೋಪಾಲಕೃಷ್ಣನ
ಸಂತೋಷವನು ಬಡಿಸಿದಾ
ಚಿಂತೆಯಲಿ ವಿದೂರನಾದನು
ಮುಂತೆ ನಡೆದ ಕಥೆ ಕೇಳಿ
ಕಂತುಹರನನ ಒಲಿಸಿ ಉಡುಪಾ
ಕಾಂತ ವರವನೆ ಐದಿದಾ ||6||

ಮೂರು ಯುಗದಲಿ ಈ ಪರಿಯಾಗೆ
ಮಾರುತ ಮಧ್ಯಗೇಹನ
ಚಾರು ಮನೆಯಲಿ ಜನಿಸಿ ವೈಷ್ಣವಾ
ಚಾರ್ಯ ಈ ದುಶ್ಯಾಸ್ತ್ರವ
ಹಾರಿಸಿದ ಹರುಷದಲಿ ರುಕ್ಮಿಣಿ
ದ್ವಾರಕೆಲಿ ಪೂಜೆ ಮಾಡಿದ
ಮೂರುತಿಯ ಸ್ಥಾಪಿಸಿದ ಲೀಲೆಯು
ಆರು ಬಣ್ಣಿಸಲಾಪರು ||7||

ಇದೇ ರಜತಪೀಠ ಅಜಕಾನನವಿದೆ
ಇದೇ ಉಡುಪಿ ಇದೇ ಶಿವಕುಲ್ಲ್ಯ
ಅದರ ಬಳಿಯಲಿಯಿಪ್ಪ ತೀರ್ಥವ
ಅದುಭುತವ ವರ್ಣಿಸುವೆನು
ಇದೇ ಅನಂತ ಸರೋವರವು ಮ
ತ್ತಿದೇ ವಾರುಣ್ಯಚಂದ್ರಮತೀರ್ಥ
ಇದಕೆ ಮಧ್ವಸರೋವರ ವೆಂ
ಬದು ಕಾಣೊ ಶ್ರುತಿ ಉಕ್ತಿಲಿ ||8||

ಸಕಲ ದೇಶದ ಜನರು ತ್ರಿವಿಧ
ಸುಖವಾರಿಧಿಯೊಳು ಸೂಸುತಾ
ಅಖಿಳ ವೈಭವದಿಂದ ಬಪ್ಪ
ಅಕಟ ಸಂದಣಿಗೇನೆಂಬೆ
ಮಕರ ರಾಶಿಗೆ ಸೂರ್ಯ ಬಂದ ಕಾ
ಲಕೆ ಕೃಷ್ಣನ ನೋಡುವೆನೆಂದು
ಚಕ್ಕನೆ ನಿಲ್ಲದೆ ಬಂದು ನೆರದಂದು
ಮುಕ್ತಾರ್ಥ ಹರಿಪ್ರೇರಕಾ ||9||

ಸಜ್ಜನರ ಸಿರಿಚರಣ ರಜದಲಿ
ಮಜ್ಜನವ ಗೈವುತ
ಹೆಜ್ಜಿಹೆಜ್ಜಿಗೆ ಕೃಷ್ಣ ಕೃಷ್ಣ
ಅಬ್ಜನಾಭ ನಾರಾಯಣ
ಮೂಜಗತ್ಪತೆ ಎಂದು ಸ್ತೋತ್ರ ನಿ
ರ್ಲಜ್ಜನಾಗಿ ಪಠಿಸುತಾ
ರಜ್ಜುಪಾಣಿಯ ಬಹಿರದಿಂದ ನಿ
ವ್ರ್ಯಾಜ್ಯ ಭಕುತಿಲಿ ನೋಡಿದೆ ||10||

ಮೊದಲು ನಮಿಸಿದೆ ಚಂದ್ರಶೇಖರ
ಪದುಮಗರ್ಭನ ಮಗನೆಂದು
ಅದರ ತರುವಾಯದಲ್ಲಿ ಮಾಯಿಯ
ಸದಬಡೆದ ಪೂರ್ಣಬೋಧರು
ಸದಮಲಾ ಕುಳುತಿಪ್ಪ ಸ್ಥಾನವ
ಒದಗಿ ನೋಡಿ ಕೊಂಡಾಡುತಾ
ಮದನ ಜನಕಾನಂತ ಸ್ವಾಮಿಯ
ಪದಯುಗಳವನು ನೋಡಿದೆ||11||

ರತುನ ಗರ್ಭದೊಳಧಿಕವಾದ ತೀ
ರಥವಿದು ಮಧ್ವಾಖ್ಯದಿ
ಸತತ ಬಿಡದಲೆ ಇಲ್ಲಿ ಭಾಗೀ
ರಥಿವಾಸ ನದಿಗಳ ಕೂಡಿ
ನುತಿಸಿ ಮೆಲ್ಲನೆ ಮುಟ್ಟಿ ಮಿಂದು
ಮತ್ತೆ ಕರ್ಮದ ಚರಿಯವ
ಹಿತ ಮನಸಿನಲ್ಲಿ ಮಾಡುವಂಥ
ಕೃತ ಕಾರ್ಯವನು ನೋಡಿದೆ ||12||

ಅಲ್ಲಿಂದ ನವರಂಧ್ರಗಳು ಕಂಡು
ಪುಲ್ಲಲೋಚನ ಕೃಷ್ಣನ
ಸೊಲ್ಲಿನಿಂದಲಿ ಪಾಡಿ ಭಾರತಿ
ವಲ್ಲಭನ ಕೊಂಡಾಡುತಾ
ಮೆಲ್ಲ ಮೆಲ್ಲನೆ ದ್ವಾರವನೆ ಪೊಕ್ಕು
ನಿಲ್ಲದಲೆ ಸಮೀಪಕೆ
ಬಲ್ಲವನು ಗುಣಿಸುತ್ತ ಭಕುತ ವ
ತ್ಸಲನಂಘ್ರಿ ನೋಡಿದೆ||13||

ಮೂರು ಬಗೆ ಭೂಷಣವ ಧರಿಸಿದ
ಮೂರುತಿ ಇದೇ ಕಾಣಿರೊ
ಪಾರುಗಾಣರು ಈತನ ಅವ
ತಾರ ಗುಣಕ್ರಿಯೆ ಮಹಿಮೆಯಾ
ವಾರಿಜೋದ್ಭವ ಶಿವ ಮುಖಾದ್ಯರು
ಸಾರಿ ಹಾಹಾ ಎಂಬರೊ
ಧಾರುಣಿಗೆ ಇದೇ ದೈವ ನವನೀತ
ಚೋರನ ಕೊಂಡಾಡಿದೆ ||14||

ತ್ರಾಹಿ ತ್ರಯಾವಸ್ಥೆ ಪ್ರೇರಕ
ತ್ರಾಹಿ ತ್ರಯಗುಣ ವಿರಹಿತಾ
ತ್ರಾಹಿ ತ್ರಯಧಾಮ ವಾಸ ಸರ್ವೇಶ
ತ್ರಾಹಿ ತ್ರಯ ರೂಪಾತ್ಮಕಾ
ತ್ರಾಹಿ ತ್ರಯವನು ಗೆದ್ದ ಪ್ರಸಿದ್ಧ
ತ್ರಾಹಿ ತ್ರಯವನು ಕೊಡುವನೆ
ತ್ರಾಹಿ ತ್ರಯಗಣ್ಣ ವನಪಾಲಕ
ತ್ರಾಹಿ ತ್ರಯಲೋಕಾಧಿಪಾ ||15||

ಪಾಹಿಪರಮಾನಂದ ಗೋವಿಂದ
ಪಾಹಿ ಪರತರ ಪರಂಜ್ಯೋತಿ
ಪಾಹಿ ಪತಿತ ಪಾವನ್ನ ಮೋಹನ್ನಾ
ಪಾಹಿ ಪಾಲಾಂಬುಧಿಶಾಯಿ
ಪಾಹಿ ಜಗದತ್ಯಂತ ಭಿನ್ನಾ
ಪಾಹಿ ನಿರ್ಭಿನ್ನ ಸ್ವರೂಪ
ಪಾಹಿ ನಖಶಿಖ ಜ್ಞಾನ ಪೂರ್ಣನ
ಪಾಹಿ ಎನ್ನಯ ಪ್ರೇಮನೆ ||16||

ನಮೋ ನಮೋ ಚತುರಾತ್ಮ ಗುಣನಿಧಿ
ನಮೋ ನಮೋ ಪುನ್ನಾಮಕ
ನಮೋ ನಮೋ ವಟಪತ್ರಶಾಯಿ
ನಮೋ ನಮೋ ಪುಣ್ಯಶ್ಲೋಕನೆ
ನಮೋ ನಮೋ ಸಮಸ್ತ ಸರ್ವಗ
ನಮೋ ನಮೋ ಸರ್ವ ಶಬ್ದನೆ
ನಮೋ ನಮೋ ಅವ್ಯಕ್ತ ವ್ಯಕ್ತಾ
ನಮೋ ನಮೋ ನಾರಾಯಣ ||17||

ಜಯ ಜಯತು ಕರಿವರದ ವಾಮನ
ಜಯತು ನಾರದ ವಂದ್ಯನೆ
ಜಯ ಜಯತು ಪ್ರಹ್ಲಾದ ರಕ್ಷಕ
ಜಯ ಜಯತು ಪಾರ್ಥನ ಸಾರಥೆ
ಜಯ ಜಯತು ಅಂಬರೀಷ ಪರಿಪಾಲಾ
ಜಯತು ಪರಾಶರನುತಾ
ಜಯ ಜಯತು ಪಾಂಚಾಲಿ ಮಾನ ಕಾಯ್ದನೆ
ಜಯ ಜಯತು ಗೋಪಿಕಾ ವಲ್ಲಭಾ||18||

ಇನಿತು ಬಗೆಯಲಿ ತುತಿಸಿ ದೇವನ
ಮನದಣಿಯ ಕೊಂಡಾಡುತಾ
ಕ್ಷಣಬಿಡದೆ ತನ್ನ ನೆನೆಸಿದವರಿಗೆ
ಹೊಣೆಯಾಗಿ ಪಾಲಿಸುವನು
ಜನುಮ ಜನ್ಮದಲಿಂದ ಮಾಡಿದ
ಘನದುರಿತ ಪರ್ವತಗಳು
ಚಿನಿಗಡೆದು ಸಾಧನವೆಲ್ಲ ವೇಗ
ತನಗೆ ತಾ ಮಾಡಿಸುವನು ||19||

ಆದಿನಾರಾಯಣನು ಗೋವಿಂದ
ವ್ಯಾಧ ಭೂಸುರ ವೇಷವು
ಭೇದ ಮಾಡಿದ ನಾರಾಯಣಿ
ಸುಪ್ರಸಾದ ನಿರ್ಮಲರೂಪವು
ಆದಿವಾರವು ವಿಡಿದು ಎರಡು
ಐದು ದಿನ ಪರಿಯಂತವು
ಶ್ರೀಧರೇಶನು ವೇಷ ಧರಿಸಿದ್ದು
ಸಾಧು ಸಂಗಡ ನೋಡಿದೆ||20||

ಉದಯಕಾಲದ ಪೂಜೆಯಾಗಲು
ಮುದ ನಿರ್ಮಾಲ್ಯ ವಿಸರ್ಜನೆ
ಇದೆ ಪೂರೈಸಲು ಮತ್ತೆ ಪಂಚ
ಸುಧ ಪೂಜೆ ಉದ್ವಾರ್ಥನೆ
ಒದಗಿಯಾಗಲು ಮೇಲೆ
ಸುಧ ವಿಧುದಂತೆ ಬೆಣ್ಣೆ ಶರ್ಕರ
ಸದತೀರ್ಥ ಅಲಂಕಾರ ಅವಸರ
ಇದೆ ಮಹ ಪೂಜೆ ನೋಡಿದೆ ||21||

ಗಂಧ ಪರಿಮಳ ತುಲಸಿ ಪುಷ್ಪಾ
ನಂದ ಭೂಷಣ ಧರಿಸಿಪ್ಪ
ಒಂದು ಕೈಯಲಿ ದಾಮ ಕಡಗೋ
ಲಂದದಲಿ ತಾಳಿದಾ
ಮಂದರಿಗೆ ಇದು ಸಾಧ್ಯವಲ್ಲವು
ಮುಂದೆ ಯತಿಗಳು ಮಂತ್ರವ
ಮಂದ ನಗಿಯಲಿ ಪೇಳುತಿಪ್ಪ
ಚಂದವನು ನಾ ನೋಡಿದೆ ||22||

ಎತ್ತುವ ಧೂಪಾರತಿಗಳು
ಹತ್ತೆಂಟು ಬಗೆ ಮಂಗಳಾ
ರುತ್ತಿ ನಾನಾ ನೈವೇದ್ಯ ಷಡುರಸ
ಮೊತ್ತಂಗಳು ಪರಿವಿಧಾ
ಉತ್ತಮ ಶಾಖಾದಿ ಘೃತದಧಿ
ತತ್ತಕ್ರಫಲ ಪಕ್ವವು
ಸುತ್ತಲು ತಂದಿಟ್ಟು ಅರ್ಪಿ
ಸುತ್ತಲ್ಲಿಪ್ಪುದು ನೋಡಿದೆ ||23||

ಮಂತ್ರ ಘೋಷಣೆ ಭಾಗವತಜನ
ನಿಂತು ಗಾಯನ ಮಾಡಲು
ಅಂತವಿಲ್ಲದೆ ವಾದ್ಯಸಂದಣಿ
ಚಿಂತಿಸುವ ನಿಜದಾಸರು
ವಂತು ವಾಳೆಯಿಲ್ಲದಾ ಜನ
ಸಂತೋಷದಲಿ ನಲಿವುತಾ
ತಂತ್ರ ಸಾರೋಕ್ತದ ಪೂಜೆ
ಅತ್ಯಂತವನು ನಾ ನೋಡಿದೆ ||24||

ತೀರ್ಥ ಪ್ರಸಾದ ಗಂಧ ಅಕ್ಷತೆ
ಅರ್ಥಿಯಲ್ಲಿ ಕೊಡುವರು
ವ್ಯರ್ಥವಲ್ಲಿವು ಇಲ್ಲಿ ಒಂದು ಮು
ಹೂರ್ತವಾದರು ಎಂದಿಗೂ
ಪಾರ್ಥಸಾರಥಿ ಉಂಡ ಶುಭ ಪ
ದಾರ್ಥ ಬಡಿಸಲು ಉಂಡು ಕೃ
ತಾರ್ಥನಾದೆನು ಜ್ಞಾನವಧಿಕ
ಸಾರ್ಥಕರನ ನೋಡಿದೆ||25||

ತರಣಿ ಮಕರಕೆ ಬರಲು ಗೋಪಾಲ
ಮೆರೆವ ವೈಭವವೆಂಬೆನೇ
ಉರಗ ಮಂಟಪ ಗಜ ತುರಗ ಹರಿ
ಗರುಡ ಶ್ರೀ ಹನುಮಂತನಾ
ವರ ರೂಢನಾಗಿ ಮೆರೆದು ಆಮೇಲೆ
ಮಿರುಗುವ ರಥವನೇ ಏರಿ
ಪರಮ ವೇಗದಿ ಚತುರ್ವೀಧಿಯ
ತಿರುಗಿ ಬಪ್ಪದು ನೋಡಿದೆ ||26||

ಓಕಳಿಯ ಸಂಭ್ರಮವೆ ಪೇಳಲು
ಗೋಕುಲಕೆ ಸಮನೆನಿಸಿತು
ವಾಕು ಕೇಳ್ ಸುರ ಮುನಿಗಳೊಡನೆ
ಲೋಕಕ್ಕಾಶ್ಚರ್ಯ ತೋರುತಾ
ಸೋಕಿ ಸೋಕದ ಹಾಸೆ ಓಕುಳೀ
ಹಾಕಿ ಆಡುವ ಲೀಲೆಯ
ಈ ಕಲಿಯುಗದಲ್ಲಿ ಸೋಜಿಗ
ಈ ಕಥೆಯಾದುದು ನೋಡಿದೆ ||27||

ಸಂಜೆ ವಾಲಗ ಎಡಬಲದಲಿ
ಪಂಜು ಕಟ್ಟಿಕೆಕಾರರು
ರಂಜಿಸುವ ಪಲ್ಲಕ್ಕಿ ಸೇವಿಪ
ರಂಜಳವಾಗಿ ಒಪ್ಪಲು
ಕುಂಜರಾರಿಯ ಪೀಠದಮೇಲೆ
ಕಂಜಲೋಚನ ಕುಳ್ಳಿರೆ ನಿ
ರಂಜನದಲಿ ಪೂಜಿಸುವ ಮತಿ
ಪುಂಜ ಯತಿಗಳ ನೋಡಿದೆ ||28||

ಶ್ರುತಿ ಪುರಾಣಗಳುಪನಿಕ್ಷತ್ ವೊ
ಸತು ಶಾಸ್ತ್ರ ಪ್ರಬಂಧವು
ಸತತ ಪೇಳುವ ಭಾಗವತ ಸುಸಂ
ಗೀತಿಯಲಿ ರಾಗ ಭೇದವು
ಶ್ರುತಿ ಕಥಾಭಾಗ ಪದ್ಯ ಅಷ್ಟಕ
ಮಿತಿಯಿಲ್ಲದಲಿಪ್ಪ ಪ್ರಸಂಗ
ತತುವ ಮಾರ್ಗದಿ ನುಡಿವ ಬಲು ಉ
ನ್ನತ ಮಹಿಮರ ನೋಡಿದೆ ||29||

Leave a Comment

Your email address will not be published. Required fields are marked *