ನಿನ್ನವರ ಸಂಗ ಎಂತಹದಯ್ಯಾ
ಅನಂತ ಜನ್ಮದ ಪಾಪ ಪುಂಜರ ನಾನು
ಬಾರೆ ಸುಜನರ ಮನಕೆ ತಾರೆ ಗಂಗೋದಕವ
ಸೇರೆ ನಿನ್ನಡಿಗಳಲಿ ಸಾರೆ ಉತ್ತಮರ ಕೀರ್ತಿ
ಬೀರೆ ನಿನ್ನಯ ಮಹಿಮೆ ಕೋರೆ ನಿರ್ಮಳ
ದಾರಿಯಾ ನೀರೆಯರ ಶಶಿಬಿಂಬ ಮೋರೆ ಬಣ್ಣಕೆ ಮೆಚ್ಚಿ
ಕಾರ್ಯ ಕಾರಣ ಜರಿದು ಭಾರಿ ತಿರುಗವನಿಗೆ||1||
ಏಕಾದಶಿ ದಿನ ಬೇಕೆಂದು ಮನವಿಟ್ಟು
ಪಾಕನ್ನ ಮಾಡಿಸುವನೊ
ಸಾಕಿದವರನ ಬಡಿದು ನೂಕಿ ಸತಿಯಳಿಂದಾ
ನೇಕಪರಿ ಮಾಡಿಸುವನೊ
ಪೋಕತನದಲ್ಲಿ ವಿವೇಕ ರಹಿತನಾಗಿ
ಗೋಕುಲವ ಹಳಿದು ಕೋ ವಾರೆವಿದ್ದವನಿಗೆ||2||
ಪರರ ವಡವೆಯ ನೋಡಿ ಧರಿಸಲಾರದೆ ಮನ
ಮರಗಿ ನಿಷ್ಠುರನಾಡಿ ಇರಳು ಹಗಲೂತ್ತ-
ಮರ ಬೈದು ಪಾಪಕ್ಕೆ ಗುರಿಯಾಗಿ ನಸುನಗುತ
ಪಿರಿದು ದುರ್ವಿಷಯದೊಳು ಹೊರಳಿ ಹಕ್ಕಲನಾಗಿ
ಮರಳಿ ಜನಗಳಲ್ಲಿ ಜನಮವಾಗುವನಿಗೆ ||3||
ಅತಿಥಿ ಅಭ್ಯಾಗತರ ಕಂಡು ಸ್ಮರಿಸದೆ
ಮತಿಹೀನವಾಗಿ ಭ-
ಕುತಿ ಲೇಸ ತಾ ತಾ ಕೊಂಬೆನಯ್ಯಾ ಆರನಾರನಾದರು ಕರಿಯೆ
ಹಿತದವರ ಜರಿದೆನೋ ಮಿತಿಯಿಲ್ಲನಾಚಾರ
ಚತುರೋಕ್ತಿಯಲಿ ನೆನೆಸಿ
ಪ್ರತಿ ಯಾರು ನಿನಗೆಂದು ಗರ್ವದಲ್ಲಿದ್ದವನಿಗೆ ||4||
ಆದಿಯಲಿ ಬಂದದ್ದು ಅಂತ್ಯದಲಿ ಪೋಗುವ
ಹಾದಿಯನು ತಿಳಿತಿಳಿದು
ಕ್ರೋಧವನು ಬಿಡದೆ ಕಾದುವೆನು ಹಲ್ಲು ಕಡಿದು
ಸಾಧುಗಳ ನೋಡದಲೆ ವೇದಾರ್ಥಗಳ ಓದಿ ಶೋಧಿಸಿ ಕೇಳಿ
ವಾದವನು ಮಾಡಿ ಸಂಪಾದಿಸುವ ದುರ್ಧರನಿಗೆ||5||
ದಿನವೆಂದು ತಿಳಿಯದಲೆ ತೃಣ ಮೊದಲಾಗಿ
ದುರ್ಧನಕೆ ಕೈಕೊಡುವೆ | ಮೊದಲೆ
ಕನಸಿನೊಳಗಾದರೂ ಗುಣಿಸುವೆ ಪರರ ಹಿಂಸೆಯನು ಬಿಡೆ
ಕ್ಷಣವಾದರು ತನುವಿನ ಕ್ಲೇಶದಲಿ
ದಿನವ ಹಾಕಿದೆ ವ್ಯರ್ಥ
ದಣಿದಣಿದು ಈ ಪರಿಯನು ಮಾಡಿದವನಿಗೆ ||6||
ಹುಟ್ಟಿದಾರಭ್ಯವಾಗಿ ಶಿಷ್ಟಾಚಾರವ ತೊರೆದು
ಕೆಟ್ಟ ಬಾಳಿದೆ ಧರಣೀಲೀ
ಸುಟ್ಟ ಸಂಸಾರದೊಳು ಸಟಿಯಾಡಿ
ಗುಟ್ಟಗುಂದಿದೆ ವಿಜಯವಿಠ್ಠಲ ನಿನ್ನ ನೆರೆ ಮರೆದು
ಕೆಟ್ಟು ನರಕಕ್ಕೆ ಮನಮುಟ್ಟಿ ಬೀಳುವವನಿಗೆ ||7||