ಮಣಿಯಲೆನ್ನ ಶಿರವು ನಿನ್ನ
ಚರಣಧೂಳಿ ತಲದಲಿ|
ನನ್ನ ಅಹಂಕಾರವೆಲ್ಲ
ಮುಳುಗಲಶ್ರುಜಲದಲಿ||
ನನಗೆ ನಾನೆ ಪೂಜೆಗೈಯೆ
ಸೊಡರನೆತ್ತಲು
ಬೆಳಕು ಬರುವ ಬದಲು ಅಯ್ಯೋ
ಬರಿಯ ಕತ್ತಲು
ಅಹಂಕಾರದಂಧಕಾರ
ಮುತ್ತುತಿದೆ ಸುತ್ತಲು||
ನನ್ನ ನಾನೆ ಮೆರೆಯದಂತೆ
ನಾನು ಗೈವ ಕರ್ಮದಿ
ನಿನ್ನ ಇಚ್ಛೆ ಪೂರ್ಣವಾಗ-
ಲೆನ್ನ ಜೀವಧರ್ಮದಿ|
ತಳೆಯಲೆನ್ನ ಜ್ಞಾನ ನಿನ್ನ
ಚರಮ ಶಾಂತಿಯ
ಬೆಳಗಲೆನ್ನ ಪ್ರಾಣ ನಿನ್ನ
ಪರಮ ಕಾಂತಿಯ
ನನ್ನನಳಿಸು ನೀನೆ ನೆಲಸು
ಹೃದಯಪದ್ಮದಲದಲಿ||
—-ಕುವೆಂಪು