ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ

ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ
ಇಲ್ಲವೋ ಕಾಣೋ ಎಂದಿಗಾದರು ಮರುಳೆ

ಹುಲಿ ಇಲಿಯಾಗುವುದು ತೋಳ ಕೋಳ್ಯಾಗುವುದು |
ಕಲಿ ಬಂದು ಹಿತ್ತಲನ್ನೀಗ ಬಳಿವ
ಖಳ ಮಹಾಚೋರ ಚೊಚ್ಚಿಲಗೌಡಿ ಮಗನಾಹ
ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ ||1||

ಕರಡಿ ಕರುವಾಗುವುದು ಉರಿ ಮಂಜು ಆಗುವುದು |
ಕರಿ ನಾಯಿಯಾಗುವುದು ಕಂಡವರಿಗೆ |
ಭರದಿಂದ ಸುರಿವ ಮಳೆ ನಿಲ್ಲೆನಲು ನಿಲ್ಲುವುದು |
ನರಹರಿಯ ನಾಮಗಳ ನಂಬಿ ಭಜಿಪರಿಗೆ ||2||

ಫಣಿ ಸರಿವೆಯಾಗುವುದು ದಣುವಾಗುತಿಹ ಮಾರ್ಗ |
ಕ್ಷಣದೊಳಗೆ ಪೋದಂತೆ ಕಾಣಿಸುವುದು |
ಘನ ಪಾಷಾಣಗಳು ತೃಣಸಮವು ಎನಿಸುವುವು |
ವನಜಾಕ್ಷನ ಕೃಪೆಯ ಪಡೆದ ದಾಸರಿಗೆ ||3||

ಕ್ಷುಧೆ ತೃಷೆಯಾಗುದು ಕ್ಷುದ್ರ ಸಂಗವಾಗದು |
ಪದೆಪದೆಗೆ ರೋಗಗಳು ಬೆನ್ನಟ್ಟವು |
ಉದಯಾಸ್ತಮಾನಗಳೆಂಬ ಭಯ ಸುಳಿಯದು |
ಪದಮನಾಭನ ಕೃಪೆಯ ಪಡೆದ ದಾಸರಿಗೆ ||4||

ಬಾರವು ಭಯಗಳು ಬಂದರೂ ನಿಲ್ಲವು |
ಹಾರಿ ಹೋಗುವುವು ದಶ ದಿಕ್ಕುಗಳಿಗೆ |
ಘೋರ ದುರಿತಾರಿ ಶ್ರೀ ವಿಜಯವಿಠ್ಠಲನಂಘ್ರಿ |
ಸೇರಿದ ಜನರಿಗೆ ಇನಿತು ಭಯವುಂಟೆ||5||

Leave a Comment

Your email address will not be published. Required fields are marked *