ಆತುರದಿ ಹಾತೊರೆದು ಬಂದೆ ಅವ್ವಾ ಎಂದು |
ಯಾತರದು ಕಾತರವು ನಿನ್ನ ಬಳಿಗಿಂದು ||
ಹೆರತನದ ಹೆದರಿಕೆಯು ಹೃದಯದೊಳು ಹೊಕ್ಕಿಹುದು
ನರತನದ ಹುದುರೊಳಗೆ ಜೀವ ಸಿಕ್ಕಿಹುದು|
ಹೊರೆತನದ ಬಲೆಯೊಳಗೆ ಬುದ್ಧಿ ಬಳಲಾಡುವುದು
ಪರೆ ನಿನ್ನ ಕಿಂಕರಗೆ ಅಭಯಕರ ನೀಡೌ||
ಎತ್ತೆತ್ತ ನೋಡಿದರು ಮತ್ತೆ ಬೇರೆ ಇಲ್ಲ
ಅತ್ತ ನೀನೇ ಮತ್ತು ಇತ್ತ ನೀನು|
ಸುತ್ತಿರುವ ಬೆದರಿಕೆಯ ಬಟ್ಟೆಯನು ಕಳೆದೊಗೆದು
ಬತ್ತಲಾದೆನು ಅವ್ವ ಬಾಲನಂತೆ ನಾನು||
ಮುಚ್ಚಿಡುವುದೇಕಿನ್ನು ಬಚ್ಚಿಡುವುದಿನ್ನೆಲ್ಲಿ
ಮುಚ್ಚುಮರೆ ಮಾಳ್ಪುದಕೆ ಮುಸುಕು ಇಹುದೆಲ್ಲಿ|
ನೆಚ್ಚು ಮೆಚ್ಚುಗಳನ್ನು ಬಿಚ್ಚು ಜೀವದೊಳೆತ್ತಿ
ಹೊಚ್ಚಿ ಪ್ರೀತಿಯ ಸೆರಗ ಎತ್ತಿಕೋ ಎನ್ನ||
—–ದ.ರಾ. ಬೇಂದ್ರೆ